ಎರಡು ಭಾಗಗಳ ಪೈಕಿ ಮೊದಲನೆಯದರಲ್ಲಿ, ನಾವು ನಮ್ಮ ಆಲೋಚನೆಗಳು ಮತ್ತು ಉದ್ದೇಶಗಳ ಮೂಲಕ ಕರ್ಮವನ್ನು ಹೆಚ್ಚಿಸದೆ ಇದ್ದ ಪಕ್ಷದಲ್ಲಿ ಜೀವನದ ಪ್ರಕ್ರಿಯೆಯೇ ಕರ್ಮವನ್ನು ಹೇಗೆ ಕರಗಿಸುತ್ತದೆ ಎಂಬುದನ್ನು ಸದ್ಗುರುಗಳು ವಿವರಿಸುತ್ತಾರೆ.

ಸದ್ಗುರು: ನಿಮ್ಮ ಜೀವನದ ಪ್ರತಿ ಕ್ಷಣವೂ, ನೀವು ಏನೇ ಮಾಡಿದರೂ ಅಥವಾ ಮಾಡದಿದ್ದರೂ, ನಿಮ್ಮ ಕರ್ಮ ಕರಗುತ್ತಿರುತ್ತದೆ. ಜೀವನ ಪ್ರಕ್ರಿಯೆಯೇ ಕರ್ಮದ ಕರಗಿಸುವಿಕೆ. ನಿಮಗೆ ನಿಗದಿಯಾದ ನಿರ್ದಿಷ್ಟ ಪ್ರಮಾಣದ ಕರ್ಮವಿದೆ, ಅದನ್ನು ನಾವು ಪ್ರಾರಬ್ಧ ಎಂದು ಕರೆಯುತ್ತೇವೆ. ಈ ಪ್ರಾರಬ್ಧವು ತನ್ನಷ್ಟಕ್ಕೆ ತಾನೇ ಕೆಲಸ ಮಾಡುತ್ತಿರುತ್ತದೆ. ಆದರೆ ಸಮಸ್ಯೆ ಎಂದರೆ ಉತ್ಪಾದನಾ ಕಾರ್ಖಾನೆ ಹೆಚ್ಚುವರಿ ಸಮಯ ಕೆಲಸ ಮಾಡುತ್ತಿದೆ - ಹೊಸ ಕರ್ಮ ಅತ್ಯಂತ ವೇಗವಾಗಿ ಕೂಡಿಕೊಳ್ಳುತ್ತಿದೆ. ಕರಗಿಸುವಿಕೆ ಒಂದು ನಿರ್ದಿಷ್ಟ ವೇಗದಲ್ಲಿ ಮಾತ್ರ ಸಾಧ್ಯ, ಆದರೆ ಜನರು ಉತ್ಪಾದನೆಯಲ್ಲಿ ಬಹಳ ಕಾರ್ಯಕ್ಷಮರಾಗಿರಬಹುದು! ಉದಾಹರಣೆಗೆ, ನಿಮ್ಮ ಸಾಮಾನ್ಯ ದಿನದಲ್ಲಿ, ನೀವು ಎದ್ದ ಕ್ಷಣದಿಂದ ನಿದ್ರೆಗೆ ಜಾರುವವರೆಗೆ, ನೀವು ವಾಸ್ತವವಾಗಿ ಕೇವಲ ಕೆಲಸ ಮಾಡುವ ಚಟುವಟಿಕೆಗಳನ್ನು ನೀವು ಯೋಚಿಸುವ ವಿಷಯಗಳಿಗೆ ಹೋಲಿಸಿದರೆ, ನೀವು ಯೋಚಿಸುವ ವಿಷಯಗಳು ನೀವು ಮಾಡುವುದಕ್ಕಿಂತ ಐವತ್ತು ಪಟ್ಟು ಹೆಚ್ಚಿರಬಹುದು. ನಾನು ಐವತ್ತು ಎಂದು ಹೇಳುವಾಗ ಬಹಳ ಮಿತವಾಗಿಯೇ ಹೇಳುತ್ತಿದ್ದೇನೆ. ನೀವು ಕರಗಿಸಿಕೊಳ್ಳಬಹುದಾದ ಪ್ರಮಾಣಕ್ಕಿಂತ ಐವತ್ತು ಪಟ್ಟು ಹೆಚ್ಚು ಕರ್ಮವನ್ನು ಉತ್ಪಾದಿಸುತ್ತಿದ್ದೀರಿ. ಇದು ಕ್ಯಾಲೋರಿಗಳಂತೆಯೇ. ನೀವು 600 ಕ್ಯಾಲೋರಿಗಳನ್ನು ಅರಗಿಸುತ್ತಿದ್ದೀರಿ ಆದರೆ 6000 ಕ್ಯಾಲೋರಿಗಳನ್ನು ತಿನ್ನುತ್ತಿದ್ದೀರಿ - ಅದು ಎಲ್ಲಾದರೂ ಕೂಡಿಕೊಳ್ಳಲೇಬೇಕು.

ನಿಮ್ಮ ಕರ್ಮದ ಕಾರ್ಖಾನೆಯನ್ನು ಮುಚ್ಚಿ

ಒಂದು ವೇಳೆ ನೀವು ಯಾವುದೇ ಕರ್ಮವನ್ನು ಮಾಡದಿದ್ದರೆ - ನಿಷ್ಕರ್ಮ - ನೀವು ಸುಮ್ಮನೆ ಕುಳಿತುಕೊಂಡರೆ. ಇದರ ಅರ್ಥ ಕರ್ಮವು ಈಗಲೂ ಅದೇ ವೇಗದಲ್ಲಿ ಕರಗುತ್ತಿದೆ, ಆದರೆ ನೀವು ಏನನ್ನೂ ಉತ್ಪಾದಿಸುತ್ತಿಲ್ಲ. ಇದಕ್ಕಾಗಿಯೇ ಆಧ್ಯಾತ್ಮಿಕ ವಾತಾವರಣವನ್ನು ಹೀಗೆ ರೂಪಿಸಲಾಗಿದೆ - ಯಾವಾಗ ಊಟ ಮಾಡಬೇಕೆಂದು ನೀವು ನಿರ್ಧರಿಸುವುದಿಲ್ಲ. ಗಂಟೆ ಬಾರಿಸಿದಾಗ, ನೀವು ಹೋಗಿ ಊಟ ಮಾಡುತ್ತೀರಿ. ಏನು ತಿನ್ನಬೇಕೆಂದು ನೀವು ನಿರ್ಧರಿಸುವುದಿಲ್ಲ. ಬಡಿಸಿದ್ದನ್ನು ಸಂತೋಷದಿಂದ ತಿನ್ನುತ್ತೀರಿ. ನೀವು ಆಯ್ಕೆ ಮಾಡುವುದಿಲ್ಲ. ನಾವು ಆಹಾರ ಆನಂದಿಸುವುದನ್ನು ವಿರೊಧಿಸುತ್ತಿಲ್ಲ, ಆದರೆ ತಿನ್ನುವ ಸರಳ ಕ್ರಿಯೆಗಾಗಿ ನೀವು ಬಯಸುವುದರ ಮೂಲಕ, ಯೋಚಿಸುವುದರ ಮೂಲಕ ಮತ್ತು ಇವುಗಳ ಗುಣಾಕಾರದ ಮೂಲಕ ಎಷ್ಟೋ ಕರ್ಮವನ್ನು ಉತ್ಪಾದಿಸುತ್ತೀರಿ. ಕೊನೆಗೂ, ನೀವು ಕೇವಲ ಅಷ್ಟನ್ನೇ ತಿನ್ನಬಹುದು. ಆಹಾರ ರುಚಿಯಾಗಿದ್ದು ನಿಮಗೆ ಬಹಳ ಇಷ್ಟವಾದರೆ ಬಹುಶಃ 5% ಹೆಚ್ಚು ತಿನ್ನಬಹುದು. ನೀವು 10% ಮೀರಿದರೆ ತೊಂದರೆಯಲ್ಲಿ ಸಿಲುಕುತ್ತೀರಿ. ತಿನ್ನುವ ಈ ಸರಳ ಕ್ರಿಯೆಗಾಗಿ, ಜನರ ತಲೆಯಲ್ಲಿ ಎಷ್ಟೆಲ್ಲಾ ನಡೆಯುತ್ತಿರುತ್ತದೆ! ನಾನು ಯಾರಂತೆಯೇ ಆಹಾರವನ್ನು ಆನಂದಿಸುತ್ತೇನೆ, ಆದರೆ ನೀವು ಆಹಾರವನ್ನು ನಿಮ್ಮ ನಾಲಿಗೆಯಲ್ಲಿ ಅಥವಾ ಹೊಟ್ಟೆಯಲ್ಲಿ ಮಾಡಬೇಕು. ಅಥವಾ ನಿಮಗೆ ಅಡುಗೆ ಮಾಡಲು ಇಷ್ಟವಿದ್ದರೆ ನೀವು ಅದನ್ನು ಪಾತ್ರೆಯಲ್ಲಿ ಮಾಡಬೇಕು. ನನಗೆ ಅಡುಗೆ ಮಾಡಲು ಇಷ್ಟ, ಆದ್ದರಿಂದ ನಾನು ಅದನ್ನು ಪಾತ್ರೆಯಲ್ಲಿ ಮಾಡುತ್ತೇನೆ. ನನಗೆ ಆಹಾರ ಇಷ್ಟವಾದರೆ ನಾನು ಅದನ್ನು ನಾಲಿಗೆಯಲ್ಲಿ ಅಥವಾ ಹೊಟ್ಟೆಯಲ್ಲಿ ಮಾಡುತ್ತೇನೆ. ನೀವು ಅದನ್ನು ತಲೆಯಲ್ಲಿ ಮಾಡುತ್ತಿದ್ದೀರಿ - ಅದು ಆಹಾರಕ್ಕೆ ಸೂಕ್ತವಾದ ಸ್ಥಳವಲ್ಲ. ತಲೆ ಮತ್ತು ಆಹಾರ ಹೊಂದಿಕೊಂಡು ಹೋಗುವುದಿಲ್ಲ - ನೀವು ಕರ್ಮವನ್ನು ಸೃಷ್ಟಿಸುತ್ತಿದ್ದೀರಿ.

ದಯವಿಟ್ಟು ನಿಮ್ಮ ಜೀವನದಲ್ಲಿ ಪ್ರತಿಯೊಂದು ಅಂಶವನ್ನೂ ಹೀಗೆ ನೋಡಿ. ನೀವು ದೈನಂದಿನ ಆಧಾರದಲ್ಲಿ ಕರಗಿಸುವುದಕ್ಕಿಂತ ಐವತ್ತು ಅಥವಾ ನೂರು ಪಟ್ಟು ಹೆಚ್ಚು ಕರ್ಮವನ್ನು ಸೃಷ್ಟಿಸುತ್ತಿದ್ದೀರಿ. ನೀವು ಅಡುಗೆ ಮಾಡುವಾಗ, ಅಥವಾ ಸಂತೋಷದಿಂದ ತಿಂದು, ಜೀರ್ಣಿಸಿಕೊಂಡು ಅದನ್ನು ನಿಮ್ಮ ಭಾಗವನ್ನಾಗಿ ಮಾಡಿಕೊಳ್ಳುವಾಗ, ನೀವು ಕರ್ಮವನ್ನು ಕರಗಿಸುತಿದ್ದೀರಿ. ಜೀವನದ ಸರಳ ಪ್ರಕ್ರಿಯೆಯೇ ಕರ್ಮವನ್ನು ಕರಗಿಸುತ್ತದೆ.

ಆಧ್ಯಾತ್ಮಿಕ ಮಾರ್ಗ ಎಂದರೆ ನಾವು ನಿಮ್ಮ ಕಾರ್ಮಿಕ ಪ್ರಕ್ರಿಯೆಯು ವೇಗಗತಿಯಲ್ಲಿ ಚಲಿಸುವಂತೆ ಬಯಸುತ್ತೇವೆ ಎಂದರ್ಥ. ನಾವು ನಿಗದಿತ ಹೊರೆಗಿಂತ ದೊಡ್ಡ ಪ್ರಮಾಣದ ಕರ್ಮವನ್ನು ತೆಗೆದುಕೊಳ್ಳಲು ಬಯಸುತ್ತೇವೆ ಏಕೆಂದರೆ ನಾವು ಹಿಂತಿರುಗಿ ಬಂದು ಮತ್ತೆ ಮತ್ತೆ ಅದನ್ನೇ ಮಾಡಲು ಬಯಸುವುದಿಲ್ಲ. ನಾವು ಈಗಲೇ ಅದನ್ನು ಮುಗಿಸಲು ಬಯಸುತ್ತೇವೆ. ಇದು ಒಬ್ಬರು ಮಾಡಬೇಕಾದ ಪ್ರಜ್ಞಾಪೂರ್ವಕ ಆಯ್ಕೆ - ನೀವು ನಿಧಾನವಾಗಿ ಮಾಡಲು ಬಯಸುತ್ತೀರಾ ಅಥವಾ ಎಲ್ಲಾ ಅರ್ಥರಹಿತ ವಿಷಯಗಳನ್ನು ಸಾಧ್ಯವಾದಷ್ಟು ಬೇಗ ಮುಗಿಸಲು ಬಯಸುತ್ತೀರಾ.

ನೀವು ಸಕ್ರಿಯ ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ತೊಡಗಿದರೆ, ಇದ್ದಕ್ಕಿದ್ದಂತೆ ಎಲ್ಲವೂ ಆಶ್ಚರ್ಯಾತ್ಮಕ ವೇಗದಲ್ಲಿ ಚಲಿಸುತ್ತಿರುವುದನ್ನು ನೀವು ಕಾಣಬಹುದು. ನೀವು ಹಿಂದೆಂದಿಗಿಂತಲೂ ಹೆಚ್ಚು ತೊಂದರೆಯಲ್ಲಿದ್ದೀರಿ ಎಂಬುದನ್ನು ಗಮನಿಸುತ್ತೀರಿ. ಹಿಂದೆ, ತೊಂದರೆಗಳು ನಿಮಗೆ ಆರು ತಿಂಗಳಿಗೊಮ್ಮೆ ಬರುತ್ತಿದ್ದವು. ಈಗ, ಪ್ರತಿ ಆರು ಗಂಟೆಗಳಿಗೊಮ್ಮೆ ನೀವು ದೊಡ್ಡ ತೊಂದರೆಯಲ್ಲಿದ್ದೀರಿ ಏಕೆಂದರೆ ನಿಮ್ಮ ಕಾರ್ಮಿಕ ಪ್ರಕ್ರಿಯೆ ವೇಗಗತಿಯಲ್ಲಿ ಚಲಿಸುತ್ತಿದೆ. ಜೀವನದ ಬಗ್ಗೆ ಅನಿಸುಮನೋಭಾವ ಹೊಂದಿರುವ ಮೂರ್ಖರು ಮಾತ್ರ  ಆಧ್ಯಾತ್ಮಿಕತೆ ಎಂದರೆ ಶಾಂತಿಯಲ್ಲಿರುವುದು ಎಂದು ನಂಬುತ್ತಾರೆ. ಇಲ್ಲ. ಆಧ್ಯಾತ್ಮಿಕರಾಗಿರುವುದು ಎಂದರೆ ಬೆಂಕಿಯಂತೆ ಇರುವುದು - ಒಳಗೆ, ಹೊರಗೆ, ಎಲ್ಲೆಡೆ. ನೀವು ಚಿರಶಾಂತಿಯಲ್ಲಿ ವಿಶ್ರಮಿಸಿದಾಗ ಶಾಂತಿ ಸಂಭವಿಸುತ್ತದೆ. ಇದು ಅತ್ಯುತ್ಸಾಹಭರಿತ ಜೀವನದ ಸಮಯ! ನೀವು ಭಾವಪರವಶರಾಗಿದ್ದರೆ ಅಥವಾ ಬಹಳ ಆನಂದದಲ್ಲಿ ಮತ್ತು ಸಂತೋಷದಲ್ಲಿದ್ದರೆ, ಕೇವಲ ಶಾಂತಿಯಲ್ಲಿರುವ ಬಗ್ಗೆ ಯೋಚಿಸುತ್ತೀರಾ? ಅಂತಹ ಯೋಚನೆಯೂ ಸಹ ನಿಮಗೆ ಬರುವುದಿಲ್ಲ.

ಕಾರ್ಮಿಕ್ ಸ್ಪ್ರಿಂಗ್

ದುರದೃಷ್ಟವಶಾತ್, ಇಂದಿನ ಕಾಲದಲ್ಲಿ ಮಾನವತೆ ಜೀವನವನ್ನು ಹೇಗೆ ತೀವ್ರಗೊಳಿಸಬೇಕು ಎಂದು ನೋಡುತ್ತಿಲ್ಲ, ನಾವು ಯಾವಾಗಲೂ ಜೀವನವನ್ನು ವಿಸ್ತರಿಸಲು ನೋಡುತ್ತಿದ್ದೇವೆ. ಇದರಿಂದಾಗಿ, ಅನೇಕ ಜನರು ಒಂದು ನಿರ್ದಿಷ್ಟ ಹಂತದ ನಂತರ ತಮ್ಮ ನೆನಪಿನ ಶಕ್ತಿ ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತಾರೆ, ಮತ್ತು ಈ ಕಾಯಿಲೆಗಳಲ್ಲಿ ಕಾರ್ಮಿಕ್ ಅಂಶವು ಬಹಳ ಮುಖ್ಯವಾಗಿದೆ.

[pullquote ಇಂದು, ಕಾರ್ಮಿಕ್ ಅಂಶದ ಕಾಳಜಿ ವಹಿಸದೆ, ನಾವು ಕೇವಲ ಮಾನವನ ಭೌತಿಕ ಜೀವನವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ, ಏಕೆಂದರೆ ನಮಗೆ ಜೈವರಸಾಯನಶಾಸ್ತ್ರದ ಮೇಲೆ ಒಂದು ನಿರ್ದಿಷ್ಟ ಪ್ರಮಾಣದ ನೈಪುಣ್ಯವಿದೆ.

ಕರ್ಮ ಎಂದರೆ ನೀವು ಅಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿದ ಒಂದು ರೀತಿಯ ಸಾಫ್ಟ್‌ವೇರ್. ನೀವು ಹುಟ್ಟುವ ಮೊದಲು, ಗರ್ಭಧಾರಣೆಯಾದ ಸುಮಾರು 40 ರಿಂದ 48 ದಿನಗಳ ನಡುವೆ, ಈ ಕಾರ್ಮಿಕ್ ತಂತು ತನ್ನನ್ನು ತಾನೇ ಸ್ಪ್ರಿಂಗ್ ಸುರುಳಿಯಂತೆ ಬಿಗಿಯಾಗಿಸಿಕೊಳ್ಳುತ್ತಿತ್ತು. ಹಿಂದಿನ ಮಾಹಿತಿಯ ಆಧಾರ, ನಿಮ್ಮ ದೇಹದ ಶಕ್ತಿ, ನಿಮ್ಮ ಪೋಷಕರ ಸ್ವಭಾವ, ಗರ್ಭಧಾರಣೆಯ ರೀತಿ ಮತ್ತು ವಿವಿಧ ಅಂಶಗಳನ್ನು ಅವಲಂಬಿಸಿ, ಅದು ಒಂದು ನಿರ್ದಿಷ್ಟ ಪ್ರಮಾಣದ ಮಾಹಿತಿಯನ್ನು ಸ್ಪ್ರಿಂಗ್‌ನಂತೆ ಬಿಗಿಯಾಗಿಸಲು ನಿರ್ಧರಿಸುತ್ತದೆ. ಇದು ಸುರುಳಿಯಾಕಾರದ ಸ್ಪ್ರಿಂಗ್‌ನಂತೆ. ನೀವು ಕೇವಲ ಕುಳಿತುಕೊಂಡರೆ, ಅದು ನಿಧಾನವಾಗಿ ತನ್ನನ್ನು ತಾನೇ ಬಿಚ್ಚಿಕೊಳ್ಳುತ್ತದೆ. ನೀವು ಎಷ್ಟು ನಿಶ್ಚಲವಾಗಿ ಕುಳಿತುಕೊಳ್ಳುತ್ತೀರೋ, ಅಷ್ಟು ವೇಗವಾಗಿ ಅದು ತನ್ನಷ್ಟಕ್ಕೆ ಬಿಚ್ಚಿಕೊಳ್ಳುತ್ತದೆ ಆದರೆ ನೀವು ಚಟುವಟಿಕೆಯಲ್ಲಿರುವುದರಿಂದ ಮತ್ತು ಹೊಸ ವಿಷಯಗಳನ್ನು ಪೇರಿಸುತ್ತಿರುವುದರಿಂದ, ಅದು ತನ್ನನ್ನು ಒಂದು ನಿರ್ದಿಷ್ಟ ವೇಗದಲ್ಲಿ ಮಾತ್ರ ಬಿಚ್ಚಿಕೊಳ್ಳುತ್ತದೆ. ಯಾರಾದರೂ ಹುಟ್ಟಿದಾಗ ಕಾರ್ಮಿಕ ತಂತುವಿನಲ್ಲಿರುವ ಬಿಗಿಯನ್ನು ನಾನು ಗಮನಿಸಿದರೆ, ಆ ಮಗು ಸುಮಾರು ಎಷ್ಟು ವರ್ಷ ಬದುಕುತ್ತದೆ ಎಂಬುದನ್ನು ಸುಲಭವಾಗಿ ಹೇಳಬಲ್ಲೆ - ಯಾವುದಾದರೂ ಕುಡಿದ ಚಾಲಕ ಆ ಮಗುವನ್ನು ಡಿಕ್ಕಿ ಹೊಡೆಯದಿದ್ದರೆ, ಅಥವಾ ಯಾವುದೇ ಆಧ್ಯಾತ್ಮಿಕ ಗುರುವಿನ ಸಂಪರ್ಕಕ್ಕೆ ಬರದಿದ್ದರೆ! ಅವನು ಕೇವಲ ಸಾಮಾನ್ಯ ಜೀವನ ನಡೆಸಿದರೆ, ಅವನು ಎಷ್ಟು ಕಾಲ ಬದುಕುತ್ತಾನೆ ಎಂದು ನಾವು ಹೇಳಬಹುದು. ಸುರುಳಿ ಒಂದು ನಿರ್ದಿಷ್ಟ ವೇಗದಲ್ಲಿ ತನ್ನನ್ನು ತಾನೇ ಕೆಲಸ ಮಾಡಿಕೊಳ್ಳುತ್ತದೆ ಎಂದು ನಮಗೆ ತಿಳಿದಿದೆ.

ಭಾರತದಲ್ಲಿ ಮಗು ಹುಟ್ಟಿದಾಗ ಮಾಡುತ್ತಿದ್ದ ಮೊದಲ ಕೆಲಸವೆಂದರೆ: ಕುಟುಂಬದವರು ಯೋಗಿ ಅಥವಾ ಋಷಿಯನ್ನು ಮನೆಗೆ ಆಹ್ವಾನಿಸುತ್ತಿದ್ದರು, ಅಥವಾ ಮಗುವನ್ನು ಅವರ ಬಳಿಗೆ ಕರೆದುಕೊಂಡು ಹೋಗುತ್ತಿದ್ದರು, ಏಕೆಂದರೆ ಅವರು ಮಗುವನ್ನು ಗಮನಿಸಬೇಕೆಂದು ಬಯಸುತ್ತಿದ್ದರು. ಇದು ಇಂದಿಗೂ ಇದೆ ಆದರೆ ಸಾಮಾನ್ಯವಾಗಿ ಹುಟ್ಟುಹಬ್ಬದ ಪಾರ್ಟಿಗಳು ಈ ವಿಷಯಗಳನ್ನು ಬದಲಾಯಿಸಿವೆ. ಇಲ್ಲದಿದ್ದರೆ, ಇದು ಅತ್ಯಂತ ಮಹತ್ವದ ವಿಷಯವಾಗಿತ್ತು. ನಿಮ್ಮ ಮಗುವಿನಲ್ಲಿ ಯಾವುದೇ ಅತಿಯಾದ ಸ್ಪ್ರಿಂಗ್ ಬಿಗಿತ ಇದೆಯೇ ಎಂದು ನೋಡಬಲ್ಲ ಮತ್ತು ಮಗುವಿನ ಯೋಗಕ್ಷೇಮಕ್ಕಾಗಿ ಅದನ್ನು ಸರಿಪಡಿಸಲು ಏನಾದರೂ ಮಾಡಬಲ್ಲ ವ್ಯಕ್ತಿಯ ಬಳಿಗೆ ನಿಮ್ಮ ಮಗುವನ್ನು ಕರೆದುಕೊಂಡು ಹೋಗಲು ನೀವು ಬಯಸುತ್ತೀರಿ. ಆದರೂ, ಕುಡಿದ ಚಾಲಕ ಅವನನ್ನು ಡಿಕ್ಕಿ ಹೊಡೆಯಬಹುದು. ಅಥವಾ ಯಾವುದೇ ಗುರು ಬಂದು ಅವನನ್ನು ಬೇಗನೆ ಬಿಡುಗಡೆ ಮಾಡಬಹುದು ಅಥವಾ ಅವನ ಪ್ರಸ್ತುತ ಹೊರೆಗೆ ಅನೇಕ ಜನ್ಮಗಳ ಕರ್ಮವನ್ನು ಸೇರಿಸಬಹುದು. ಹಾಗಾಗಿ, ಅದು ಮತ್ತೆ ಸುತ್ತಿಕೊಳ್ಳದ ಅಥವಾ ಅತಿ ಬೇಗನೆ ಬಿಡುಗಡೆಯಾಗದ ಹೊರತು ಕರ್ಮ ತನ್ನದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಇವು ನಿರ್ದಿಷ್ಟ ಸಮಸ್ಯೆಗಳಿಂದಾಗಿ ಹೀಗೆಲ್ಲಾ ಆಗಬಹುದು.

ಇಂದು, ಕಾರ್ಮಿಕ್ ಅಂಶದ ಕಾಳಜಿ ವಹಿಸದೆ, ನಾವು ಕೇವಲ ಮಾನವನ ಭೌತಿಕ ಜೀವನವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ, ಏಕೆಂದರೆ ನಮಗೆ ಜೈವರಸಾಯನಶಾಸ್ತ್ರದ ಮೇಲೆ ಒಂದು ನಿರ್ದಿಷ್ಟ ಪ್ರಮಾಣದ ನೈಪುಣ್ಯವಿದೆ. ನಾವು ಔಷಧ ಮತ್ತು ಶಸ್ತ್ರಚಿಕಿತ್ಸೆಗಳ ಮೂಲಕ ಜೀವನವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಒಂದು ನಿರ್ದಿಷ್ಟ ಹಂತದ ನಂತರ ಅನೇಕ ಜನರು ತಮ್ಮ ನೆನಪು ಮತ್ತು ಮಾನಸಿಕ ಸಾಮರ್ಥ್ಯಗಳನ್ನು ಕಳೆದುಕೊಳ್ಳುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿರಬಹುದು ಏಕೆಂದರೆ ಇದು ಒಂದು "ಮೂಢ ಕಂಪ್ಯೂಟರ್" - ನೀವು ಏನು ಬೇಕಾದರೂ ಮಾಡಿ, ಅದು ಕೇವಲ ನಿಮ್ಮನ್ನು ದಿಟ್ಟಿಸಿ ನೋಡುತ್ತದೆ ಏಕೆಂದರೆ ಸಾಫ್ಟ್‌ವೇರ್ ಮುಗಿದಿದ್ದರೂ, ಬದಲಾಯಿಸಿದ ಹೃದಯ ಅಥವಾ ಮೂತ್ರಪಿಂಡದೊಂದಿಗೆ ಹಾರ್ಡ್‌ವೇರ್ ಅನ್ನು ಇನ್ನೂ ಮುಂದುವರಿಸಲಾಗುತ್ತಿದೆ.

ಅವರು ತಮ್ಮ ಜೀವನದ ಇತರ ಆಯಾಮವನ್ನು ವೃದ್ಧಿಸಲು ಪ್ರಯತ್ನಿಸಿದ್ದರೆ ಮತ್ತು ಸ್ವಲ್ಪ ಆಧ್ಯಾತ್ಮಿಕ ಕೆಲಸವನ್ನು ಮಾಡಿದ್ದರೆ - ಭೌತಿಕತೆಯನ್ನು ಮೀರಿ ಏನಾದರೂ - ಆಗ ನೀವು ಸಾವಿರ ವರ್ಷ ಬದುಕಿದರೂ ಅಗತ್ಯವಾದ ಸಾಫ್ಟ್‌ವೇರ್ ಅನ್ನು ಉತ್ಪಾದಿಸಬಹುದು ಏಕೆಂದರೆ ಬೇರೆಡೆ ಬಹಳಷ್ಟು ವಿಷಯಗಳಿವೆ. ಸಂಚಿತ ಎಂದು ಕರೆಯಲ್ಪಡುವ ಕರ್ಮದ ಗೋದಾಮು ಇದೆ ಅದನ್ನು ಈಗ ತೆರೆಯಲಾಗಿಲ್ಲ. ಅಥವಾ, ನಿಮ್ಮ ಸಾಫ್ಟ್‌ವೇರ್ ಹೋಗುತ್ತಿರುವಾಗ ನಿಮ್ಮ ಹಾರ್ಡ್‌ವೇರ್ ಅನ್ನು ಬಿಡುವ ಸ್ವಾತಂತ್ರ್ಯವೂ ನಿಮಗಿರುವಂತೆ ನಿಮ್ಮನ್ನು ನೀವು ಪ್ರೋಗ್ರಾಮ್ ಮಾಡಿಕೊಂಡಿರಬಹುದು.

Editor's Note: Find more of Sadhguru’s insights in the book “Of Mystics and Mistakes.” Download the preview chapter or purchase the ebook at Isha Downloads.